ಪಡುಮಾರ್ನಾಡು ಪಂಚಾಯತ್ ಗೆ ಅಧಿಕಾರಿಗಳಿಲ್ಲ ಫುಲ್ ಟೈಮ್… *ಯಾರಲ್ಲಿ ಹೇಳಲಿ ಜನರ ಪ್ರಾಬ್ಲೆಮ್ ….?

Picture of Namma Bedra

Namma Bedra

Bureau Report

ಪಡುಮಾರ್ನಾಡು ಗ್ರಾಮ ಪಂಚಾಯತ್. ಚುನಾವಣೆಯ ಸಂದರ್ಭದಲ್ಲಿ ಮತ್ತು ಆ ಬಳಿಕ ನಡೆದ ಕೆಲವೊಂದು ಪಾಲಿಟಿಕ್ಸ್ ನಿಂದಾಗಿ ಗಮನಸೆಳೆದಿದ್ದ ಪಂಚಾಯತ್ ಇದು. ತುಂಬಾ ಮಂದಿ ಖ್ಯಾತನಾಮರು ಸದಸ್ಯರಾಗಿ, ಬುದ್ಧಿವಂತಿಕೆಯ ಪಾಲಿಟಿಕ್ಸ್ ಮಾಡಿ ಹೆಸರುಗಳಿಸಿದವರಿದ್ದಾರೆ.ಪಡು ಮತ್ತು ಮೂಡು ಮಾರ್ನಾಡು ಎಂಬ ಎರಡು ಗ್ರಾಮಗಳು ಇಲ್ಲಿನ ಆದಾಯಕ್ಕಿರುವ ಪ್ರಮುಖ ಗ್ರಾಮಗಳು.
ಇಲ್ಲೀಗ ಒಂದು ಸಮಸ್ಯೆ ಶುರುವಾಗಿದೆ. ಪಿ.ಡಿ.ಒ.ಇಲ್ಲ, ಕಾರ್ಯದರ್ಶಿ ಇಲ್ಲ, ವಿ.ಎ. ಇಲ್ಲ, ಗ್ರಾಮ ಒನ್ ಇಲ್ಲ. ಎಲ್ಲವೂ ಇಲ್ಲ,ಇಲ್ಲ,ಇಲ್ಲ…!
ಕಳೆದ ಎರಡು ವರ್ಷಗಳಲ್ಲಿ ಇಲ್ಲಿನ ಪಿ.ಡಿ.ಒ.ಆಗಿದ್ದ ಸಾಯೀಶ್ ಚೌಟ ಅವರು ಇತ್ತೀಚೆಗೆ ಹಳೆಯಂಗಡಿಗೆ ವರ್ಗಾವಣೆಗೊಂಡಿದ್ದಾರೆ. ಅವರೊಬ್ಬ ಮೂಡುಬಿದಿರೆ, ಮೂಲ್ಕಿ ಕಂಡ ಬೆಸ್ಟ್ ಆಫಿಸರ್. ಸಿಬ್ಬಂದಿಗಳು,ಸದಸ್ಯರು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದ ಅಧಿಕಾರಿಯಾಗಿ ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ಪಿ.ಡಿ.ಒ.ಆಗಿದ್ದರು. ಅವರು ವರ್ಗಾವಣೆಗೊಂಡ ನಂತರ ಇಲ್ಲಿ ಎಲ್ಲವೂ ಕತ್ತಲೆ ಕತ್ತಲೆಯಾದಂತಾಗಿದೆ.
ಈಗ ಹೊಸಬೆಟ್ಟು ಪಂಚಾಯತ್ ನ ಕಾರ್ಯದರ್ಶಿಯೇ ಇಲ್ಲಿನ ಪ್ರಭಾರ ಪಿ.ಡಿ.ಒ. ಇಲ್ಲಿನ ಕಾರ್ಯದರ್ಶಿ ಹುದ್ದೆ ಖಾಲಿಯಿದೆ. ವಿ.ಎ.ಅವರು ವಾರದಲ್ಲಿ ಎರಡು ದಿನ ಬರುತ್ತಾರೆಂಬ ಸುದ್ದಿ ಇತ್ತಾದರೂ ಅವರೀಗ ಸರಿಯಾಗಿ ಬರುತ್ತಿಲ್ಲ.ಹೊಸಬೆಟ್ಟಿನಿಂದ ಕಾರ್ಯದರ್ಶಿಯವರು ಬಂದರೆ ಬಂದರು.
ಜನರು ತಮ್ಮ ಅಗತ್ಯ ಕೆಲಸಕ್ಕಾಗಿ ದಿನವಿಡೀ ಕಾಯಬೇಕು ಅಥವಾ ಇನ್ನೂರು ರೂಪಾಯಿ ಬಾಡಿಗೆ ಕೊಟ್ಟು ಮೂಡುಬಿದಿರೆಗೆ ಹೋಗಬೇಕು.ಅಲ್ಲಿ ಹೋದರೂ ವಿ.ಎ.ಸಿಗದಿದ್ದರೆ ಎಲ್ಲವೂ ಲಾಸ್.
ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಒನ್.ವ್ಯವಸ್ಥೆ ಇರುತ್ತದೆ- ಇಲ್ಲಿ ಮಾತ್ರ ಅದೂ ಇಲ್ಲ. ಎರಡು ರೂಪಾಯಿಯ ಜೆರಾಕ್ಸ್ ತೆಗೆಯಬೇಕಾದರೂ ನೂರ ಐವತ್ತು ರೂಪಾಯಿ ಬಾಡಿಗೆ ಕೊಟ್ಟು ಪುರಸಭಾ ವ್ಯಾಪ್ತಿಯ ಅಲಂಗಾರಿಗೆ ಹೋಗಬೇಕು. ಇಂಥದ್ದೆಲ್ಲಾ ಪ್ರಾಬ್ಲೆಮ್ಸ್ ಈ ಪಂಚಾಯತ್ ನಲ್ಲಿದೆ.ಐದು ಮಂದಿ ಸಿಬ್ಬಂದಿಗಳು ಮಾತ್ರ ಪಂಚಾಯತ್ ನಲ್ಲಿರುವುದು.ಆದರೆ ಜನರಿಗೆ ಅಗತ್ಯವಾಗಿ ಬೇಕಿರುವ ಪಿ.ಡಿ.ಒ, ವಿ.ಎ.ಇಲ್ಲದಿದ್ದರೆ ಪ್ರಯೋಜನವಾದರೂ ಏನು ?
ಒಂಥರಾ ಪುಗೆಪತ್ತಿನಂತಿದ್ದ ಪಂಚಾಯತ್ ಕಟ್ಟಡವನ್ನು ಕೆಲವು ಲಕ್ಷ ಖರ್ಚು ಮಾಡಿ ಮದಿಮಾಲ್ ನಂತೆ ಸಿಂಗರಿಸಿದ್ದರು ಚೌಟರು. ಅಧ್ಯಕ್ಷ ಉಪಾಧ್ಯಕ್ಷರಿಗೆ ಕ್ಯಾಬಿನ್, ಸಿಬ್ಬಂದಿಗಳಿಗೆ ಕ್ಯಾಬಿನ್ ಅಂತೆಲ್ಲಾ ಮಾಡಿ ಹೊಸ ಪೈಂಟು,ಹೊಸ ಬಣ್ಣ ಎಲ್ಲವೂ ಮಾಡಲಾಗಿತ್ತು.
ಈಗ ಪಂಚಾಯತ್ ಆಡಳಿತವಿಲ್ಲ.ಸದಸ್ಯರಿಗೆ ಅಧಿಕಾರವಿಲ್ಲ.ಕೆಲವು ಸದಸ್ಯರು ಮಾತ್ರ ಅಪರೂಪಕ್ಕೊಮ್ಮೆ ಬಂದು ಹೋಗುತ್ತಾರೆ.ಜನರ ಕಷ್ಟ ದೂರದ ಬೆದ್ರದಲ್ಲಿರುವ ಮೇಲಾಧಿಕಾರಿಗಳಿಗೆ ಅರ್ಥವಾಗಲ್ಲ.

ಬಬ್ಬಣ್ಣನ ಮನೆಯಲ್ಲಿ ಜೆರಾಕ್ಸ್ ಮಿಷನ್:

ಜನರಿಗೆ ಗ್ರಾಮ ಒನ್ ಇಲ್ಲದೆ ಸಮಸ್ಯೆಯಾಗುವುದನ್ನರಿತ ಇಲ್ಲಿನ ಮಾಜಿ ಸದಸ್ಯ ರಮೇಶ್ ಶೆಟ್ಟಿ (ಬಬ್ಬಣ್ಣ) ಅವರು ಒಂದು ಜೆರಾಕ್ಸ್ ಮಿಷನನ್ನು ಖರೀದಿಸಿ ಮನೆಯಲ್ಲೇ ಕೆಲವು ಜನರಿಗೆ ಉಚಿತವಾಗಿ ಜೆರಾಕ್ಸ್ ಮಾಡಿಕೊಡುತ್ತಿದ್ದಾರೆ. ಕೆಲವೊಂದು ಅಗತ್ಯ ಅರ್ಜಿಗಳನ್ನು ಅವರೇ ಭರ್ತಿ ಮಾಡಿಕೊಟ್ಟು ಜನರಿಗೆ ಉಪಕಾರ ಮಾಡುತ್ತಿದ್ದಾರೆ‌.ಶೆಟ್ಟರ ಈ‌ ಸೇವೆ ಅವರ ವಾರ್ಡ್ ನವರಿಗೆ ಮಾತ್ರವಲ್ಲ, ಇಡೀ ಪಂಚಾಯತ್ ವ್ಯಾಪ್ತಿಯ ಯಾರು ಹೋದರೂ ಈ ಉಚಿತ ಸೇವೆ ಲಭ್ಯವಿದೆ. ಅಧಿಕಾರವಿಲ್ಲವೆಂದು ಜನರಿಂದ ದೂರವಾಗದೆ ತನ್ನಿಂದಾಗುವ ಸೇವೆ ನೀಡುತ್ತಿರುವ ರಮೇಶ ಶೆಟ್ಟರ ಈ ಉಪಕಾರ ದೊಡ್ಡದು.

ಸಿಂಗಾರಗೊಂಡ ಪಡುಮಾರ್ನಾಡು ಪಂಚಾಯತ್ ಗೆ ಪೂರ್ಣಕಾಲದ ಪಿ.ಡಿ.ಒ. ಬೇಕು, ವಿ.ಎ.ಬರಬೇಕು, ಕಾರ್ಯದರ್ಶಿ ಹುದ್ದೆ ಭರ್ತಿಯಾಗಬೇಕು ಮತ್ತು ಗ್ರಾಮ ಒನ್ ವ್ಯವಸ್ಥೆ ಆಗಬೇಕೆನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ.ತಹಶೀಲ್ದಾರರು ಇಲ್ಲಿನ ಜನರಿಗಾಗುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸಬೇಕಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top