‘ನಾನು ಶಾಲೆಗೆ ಹೋಗುವಾಗ ಏಳೆಂಟು ಕಿಲೋ ಮೀಟರ್ ನಡೆದುಕೊಂಡೇ ಹೋಗಬೇಕಿತ್ತು,ಮನೆಯಲ್ಲಿ ಬಡತನ, ಚಪ್ಪಲಿ ಇರಲಿಲ್ಲ, ಬೀಜ ಒಟ್ಟುಗೂಡಿಸಿ ಅದನ್ನು ಮಾರಿ ಏಳು ರೂಪಾಯಿ ಕೊಟ್ಟು ಸ್ಲಿಪ್ಪರ್ ಚಪ್ಪಲಿ ಖರೀದಿಸಿದ್ದೆ,ಆ ಸ್ಲಿಪ್ಪರ್ ಹಾಕಿ ನಡೆಯುವಾಗ ಬರುತ್ತಿದ್ದ ಟಪಾ..ಟಪಾ ಸದ್ದು ಇನ್ನೂ ನೆನಪಿದೆ,ಸವೆದು ಹೋಗಬಾರದೆಂದು ಸಂಜೆಗೆ ಅದನ್ನು ಒರೆಸಿ ಜೋಪಾನವಾಗಿ ತೆಗೆದಿಡುತ್ತಿದ್ದ ದಿನಗಳು ಇನ್ನೂ ನೆನಪಿದೆ, ನನ್ನ ಜೀವನದಲ್ಲಿ ಮೂವರು ಶಿಕ್ಷಕಿಯರನ್ನು ನಾನು ಶಾಸಕ ಅಲ್ಲ,ಇನ್ನೂ ಎತ್ತರಕ್ಕೆ ಹೋದರೂ ಮರೆಯುವ ಹಾಗಿಲ್ಲ, ಊಟಕ್ಕಿಲ್ಲದ ಆ ದಿನಗಳಲ್ಲಿ ನನಗೆ ಮನೆಗೆ ಕರೆದುಕೊಂಡು ಹೋಗಿ ಪಕ್ಕದಲ್ಲೇ ಕುಳಿತು ಊಟ ಬಡಿಸುತ್ತಿದ್ದ ಮೋಂತಿ ಟೀಚರ್ ಮತ್ತು ಇಬ್ಬರು ಟೀಚರ್ಸ್ ( ಹೆಸರು ಹೇಳಿದ್ದರು) ತಾಯ ಪ್ರೀತಿ ತೋರಿಸಿದ್ದರು,ಅವರನ್ನೆಲ್ಲಾ ಹೇಗೆ ಮರೆಯಲಿ? ….. ಹೀಗೆ ತನ್ನ ಬಾಲ್ಯ ಮತ್ತು ಬಡತನವನ್ನು ನೆನಪಿಸಿದವರು ಶಾಸಕ ಉಮಾನಾಥ ಕೋಟ್ಯಾನ್.
ಅಳಿಯೂರು ಸರಕಾರಿ ಪ್ರೌಢಶಾಲಾ ವತಿಯಿಂದ ಪ್ರಶಸ್ತಿ ವಿಜೇತ ಇಬ್ಬರು ಶಿಕ್ಷಕಿಯರು ಮತ್ತು ಕಳೆದ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ನೆರವೇರಿಸಿ ಅವರು ಮಾತನಾಡಿದರು.
‘ಪ್ರತಿಭೆ ಎನ್ನುವುದು ತಾಯ ಹೊಟ್ಟೆಯಿಂದ ಹೊರಬಂದ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಇದೆ, ಅದನ್ನು ಗುರುತಿಸಿ ಹೊರತರುವ ಪ್ರಯತ್ನವನ್ನು ಮೊದಲಿಗೆ ಆತ ಅಥವಾ ಆಕೆಯೇ ಮಾಡಬೇಕು, ಬಳಿಕ ಶಿಕ್ಷಕರು ಹಾಗೂ ಪೋಷಕರು ಆ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು’ ಎಂದು ಅವರು ಹೇಳಿದರು.
ಸರಕಾರಿ ಶಾಲೆ, ಕಾಲೇಜು ಎಂದರೆ ಯಾರಿಗೂ ತಾತ್ಸಾರ ಬೇಡ,ಈಗ ವಿದ್ಯಾರ್ಥಿಗಳಿಗೆ ಸರಕಾರ ಎಲ್ಲ ಸೌಲಭ್ಯಗಳನ್ನೂ ನೀಡುತ್ತಿದೆ,ನೀವೆಲ್ಲಾ ಭಾಗ್ಯಶಾಲಿಗಳೆಂದು ವಿದ್ಯಾರ್ಥಿಗಳಿಗೆ ಹೇಳಿದ ಅವರು ಇದನ್ನೆಲ್ಲಾ ಸದುಪಯೋಗ ಪಡಿಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಸಮಾಜದಲ್ಲಿ ಸತ್ಪ್ರಜೆಗಳಾಗಬೇಕೆಂದರು.
ಎಷ್ಟೇ ಎತ್ತರಕ್ಕೇರಿದರೂ ಕಲಿತ ಶಾಲೆ, ಕಲಿಸಿದ ಶಿಕ್ಷಕರು ,ಬೆಳೆದ ಪರಿಸರ ಮತ್ತು ಕಷ್ಟಪಟ್ಟು ಓದಿಸಿದ ಹೆತ್ತವರನ್ನು ಯಾವ ಕಾಲಕ್ಕೂ ಮರೆಯಬಾರದೆಂದು ಹೇಳಿದ ಅವರು ವಿದ್ಯಾರ್ಥಿಗಳಿಗೆ 625 ರಲ್ಲಿ 625 ಅಂಕ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು.625 ಅಂಕಗಳನ್ನು ನೀಡಿದರೆ ಅಂತಹ ವಿದ್ಯಾರ್ಥಿಗಳಲ್ಲಿ ತನಗೆಲ್ಲವೂ ಗೊತ್ತಿದೆ ಎನ್ನುವ ಅಹಂಕಾರ ಮೂಡಲು ಕಾರಣವಾಗುತ್ತದೆ,ಒಂದು ಅಥವಾ ಅರ್ಧ ಅಂಕ ಕಡಿಮೆಕೊಟ್ಟಲ್ಲಿ ಆ ವಿದ್ಯಾರ್ಥಿಗೆ ತಾನೆಲ್ಲಿ ಎಡವಿದ್ದೇನೆ ಎಂದು ಅನ್ವೇಷಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ನನ್ನ ಅವಧಿಯಲ್ಲಿ,ಈ ಭಾಗದವರ ಬಹುಕಾಲದ ಬೇಡಿಕೆಯ ಪರಿಣಾಮವಾಗಿ ಅಳಿಯೂರಿಗೆ ಪದವಿ ಪೂರ್ವ ಕಾಲೇಜು ಹಾಗೂ ಬನ್ನಡ್ಕಕ್ಕೆ ಪದವಿ ಕಾಲೇಜನ್ನು ಬಹಳಷ್ಟು ಶ್ರಮಪಟ್ಟು ತಂದಿದ್ದೇನೆ, ಇದನ್ನು ಈ ಭಾಗದವರು ಅರ್ಥ ಮಾಡಿಕೊಳ್ಳಬೇಕು, ಸರಕಾರಿ ಕಾಲೇಜಿನಲ್ಲಿ ಉತ್ತಮ ವಿದ್ಯಭ್ಯಾಸ ನೀಡಲಾಗುತ್ತಿದೆಯಾದರೂ ಕೆಲವರು ದೂರದ ಆಳ್ವಾಸ್, ಜೈನ್, ಧವಳಾ ಎಂದು ಹೋಗುತ್ತಾರೆ, ಕೆಲವು ವಿದ್ಯಾರ್ಥಿಗಳಿಗೆ ಅದರಿಂದ ಪೇಟೆ ತಿರುಗುವ ಉದ್ದೇಶವೂ ಇದೆ, ಶಿಕ್ಷಣ ಎಲ್ಲಾ ಕಡೆ ಒಂದೇ ಎಂದರಲ್ಲದೆ ಪ್ರಶಸ್ತಿ ವಿಜೇತ ಶಿಕ್ಷಕರು,ಉತ್ತಮ ಅಂಕ ಪಡೆದ ವಿದ್ಯಾರ್ಥಿ ಗಳನ್ನು ಅಭಿನಂದಿಸಿದರು.
ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ವಿದ್ಯಾ ಸಂದೀಪ್ ನಾಯಕ್ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿರುವ ರೇಖಾ ಜತನ್ನ ,ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ವಾಲ್ಪಾಡಿ ಗ್ರಾ.ಪಂ.ಅಧ್ಯಕ್ಷೆ ವಿಶಾಲಾಕ್ಷಿ, ಸದಸ್ಯರಾದ ಶ್ರೀಧರ ಬಂಗೇರ, ಗಣೇಶ್ ಬಿ.ಅಳಿಯೂರು, ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷರಾದ ಪ್ರದೀಪ್ ಕುಮಾರ್, ತಾ.ಪಂ. ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ, ಆದಿರಾಜ ಜೈನ್, ಸುನಿಲ್ ಪಣಪಿಲ ,ವಸಂತ ಪೂಜಾರಿ,ಸುಕುಮಾರ್ ಜೈನ್, ಪ್ರವೀಣ್ ಪೂಜಾರಿ, ಲಕ್ಷ್ಮಣ ಸುವರ್ಣ, ದೀಕ್ಷಿತ್, ಬಶೀರ್, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕರಾದ ಸುಬ್ರಹ್ಮಣ್ಯ ಅವರು ಸ್ವಾಗತಿಸಿ, ಮುಖ್ಯೋಪಾಧ್ಯಾಯರಾದ ಚಿನ್ಮಯಾನಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾದೇವ ಮೂಡುಕೊಣಾಜೆ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕಿಯರಾದ ರೇಖಾ, ಮಂಜುಳಾ, ಪದ್ಮಿನಿ, ರಂಜನ, ಆ್ಯನಿ ಕ್ರಾಸ್ತಲಿನೊ, ಮನಿತಾ, ತೇಜಶ್ರೀ, ಸವಿತಾ, ಅಲ್ಫಿಯಾ, ನಿರ್ಮಲಾ ಮತ್ತಿತರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
