ಇದೊಂದು ಅಪರೂಪದ ಪ್ರಕರಣ. ಮುಸುಕುಧಾರಿ ಮಹಾ ದನಕಳ್ಳರಿಂದ ಕಳವಾಗಿದ್ದ ದನಗಳು ಮರಳಿ ಮಾಲಕರ ಮನೆಸೇರಿದ ಪ್ರಕರಣವಿದು.
ಇಪ್ಪತ್ತು ದಿವಸಗಳ ಹಿಂದೆ ಕಲ್ಲಮುಂಡ್ಕೂರಿನ ಬಲರಾಮ್ ಎಂಬವರ ಎರಡು ದನಗಳನ್ನು ಮೂವರು ಮುಸುಕುಧಾರಿ ಕಳ್ಳರು ಹೊತ್ತೊಯ್ದಿದ್ದರು.ಅವುಗಳನ್ನು ಕಾರಿಗೆ ತುಂಬಿಸಿ ಪರಾರಿಯಾಗುವ ದೃಶ್ಯಗಳೆಲ್ಲಾ ಸಿಸಿ ಕೆಮರಾದಲ್ಲಿ ಸೆರೆಯಾಗಿ ಅದು ಸಾಕಷ್ಟು ವೈರಲ್ ಆಗಿತ್ತು.
ಈ ಪ್ರಕರಣವನ್ನು ಪತ್ತೆ ಹಚ್ಚಲೇಬೇಕೆಂದು ಪೊಲೀಸರಿಗೂ ಒತ್ತಡವಿತ್ತು.ಈ ಪ್ರಕರಣದ ಹಿಂದೆ ಬಿದ್ದ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರ ತಂಡವು ಮಾಹಿತಿಯನ್ನು ಕಲೆಹಾಕುತ್ತಲೇ ಇತ್ತು.
ಕಲ್ಲಮುಂಡ್ಕೂರಿನಿಂದ ವಾಪಾಸು ಮೂಡುಬಿದಿರೆ ದಾರಿಯಾಗಿಯೇ ಹೋಗಿದ್ದ ದನಕಳ್ಳರ ಕಾರಿನ ಬಗ್ಗೆನೇ ಇದ್ದ ಸಿಸಿ ಕೆಮರಾಗಳನ್ನು ಪರಿಶೀಲಿಸಿದ್ದರು. ಕಾರು ಗಂಜಿಮಠ ಪಾಸ್ ಆಗುವುದು ಗೊತ್ತಾಗುತ್ತದೆ.ಅದರಂತೆ ತನಿಖೆ ಮುಂದುವರಿಸಿದ ಪೊಲೀಸರಿಗೆ ಆ ದನಗಳು ಅಡ್ಡೂರಿನಲ್ಲಿರುವುದು ಗೊತ್ತಾಗುತ್ತದೆ. ಅಲ್ಲಿಗೆ ಹೋಗಿ ಪರಿಶೀಲಿಸಿದಾಗ ಕಳವಾದ ದನಗಳು ಅದೇ ಎಂದು ಸಾಬೀತಾಗುತ್ತದೆ.
ದನಕಳ್ಳರು ಅಡ್ಡೂರಿನ ವ್ಯಾಪಾರಿಯೊಬ್ಬರಿಗೆ ಅವುಗಳನ್ನು ಮಾರಾಟ ಮಾಡಿದ್ದರು.
ಅದರಂತೆ ವಾರೀಸುದಾರರನ್ನು ಕರೆದುಕೊಂಡು ಹೋಗಿ ಆ ದನಗಳನ್ನು ವಾಪಾಸು ಕೊಡಿಸುವಲ್ಲಿ ಮೂಡುಬಿದಿರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಂದಹಾಗೆ ಕಳ್ಳರ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು ಶೀಘ್ರದಲ್ಲೇ ಆ ಮುಸುಕುಧಾರಿ ಕಳ್ಳರ್ಯಾರು ಅನ್ನೋದು ಗೊತ್ತಾಗಲಿದೆ ಎಂದು ಹೇಳಲಾಗುತ್ತಿದೆ.
ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಹುಸೈನ್, ಅಖಿಲ್ ಅಹ್ಮದ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಸಂದೇಶ್ ಪಿ.ಜಿ.ಅವರ ನೇತೃತ್ವದ ಪೊಲೀಸರ ತಂಡಕ್ಕೆ ಕಲ್ಲಮುಂಡ್ಕೂರು ಪರಿಸರದ ಜನರು ಕೃತಜ್ಞತೆ ಸಲ್ಲಿಸಿದ್ದಾರೆ.













