ಕೇಂದ್ರ ಸರಕಾರವು ರಾಜ್ಯದಲ್ಲಿ 7.76 ಲಕ್ಷ ಶಂಕಾಸ್ಪದ ಪಡಿತರ ಚೀಟಿದಾರರಿದ್ದು ಅದರಲ್ಲಿ 5.80 ಲಕ್ಷ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸುವಂತೆ ಸೂಚಿಸಿ ಬಡಜನರಿಗೆ ಅನ್ಯಾಯವೆಸಗಿದೆ, ಬಡ ಜನರಿಗಾಗುವ ಈ ಅನ್ಯಾಯದ ಬಗ್ಗೆ ಬಿಜೆಪಿ ಶಾಸಕರಾಗಲೀ, ಸಂಸದರಾಗಲೀ ಯಾಕೆ ಧ್ವನಿ ಎತ್ತುತ್ತಿಲ್ಲವೆಂದು ಮೂಡುಬಿದಿರೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಕೇಂದ್ರ ಸರಕಾರದ ತೆರಿಗೆ ಮಂಡಳಿಯ ವರದಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಒಟ್ಟು 5.80 ಲಕ್ಷ ಜನರು ಬಿಪಿಎಲ್ ಪಡಿತರ ಚೀಟಿ ಹೊಂದಲು ಅರ್ಹರಲ್ಲ, ಅಂತವರ ಪಡಿತರ ಚೀಟಿಯನ್ನು ಈ ತಿಂಗಳ 30 ರೊಳಗೆ ರದ್ದುಗೊಳಿಸುವಂತೆ ಸೂಚಿಸಿದೆ, ಈ ಕ್ರಮ ಸರಿಯಲ್ಲ,ಈ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ನಿರ್ಧಾರದಿಂದ ಮೂಡುಬಿದಿರೆ ತಾಲೂಕಿನಲ್ಲೂ ಹೆಚ್ಚಿನ ಬಡವರು ಬಿಪಿಎಲ್ ಪಡಿತರ ಚೀಟಿಯನ್ನು ಕಳೆದುಕೊಳ್ಳಲಿದ್ದಾರೆ, ಬಿಜೆಪಿಯ ಶಾಸಕರಿಗೆ, ಸಂಸದರಿಗೆ ಬಡ ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಇದರ ಬಗ್ಗೆ ಧ್ವನಿ ಎತ್ತಲಿ ಎಂದೂ ಅವರು ಆಗ್ರಹಿಸಿದ್ದಾರೆ.













