‘ನಿನ್ನೆಯಿಂದ ನಿಮಗೆ ಕಾಲ್ ಮಾಡುತ್ತಿದ್ದೇನೆ,ನೀವು ಒಬ್ಬ ಜನಪ್ರತಿನಿಧಿಯಾಗಿರುವ ನನ್ನ ಕಾಲ್ ರಿಸೀವ್ ಮಾಡದೆ,ವಾಪಾಸೂ ಮಾಡದೆ ಅಗೌರವ ತೋರಿಸುತ್ತಿದ್ದೀರಿ, ವಾಟ್ಸಾಪ್ ಮಾಡಿ ವಿಷಯ ಕೇಳಿದರೂ ರೆಸ್ಪಾನ್ಸ್ ಇಲ್ಲ, ನೀವು ನನ್ನನ್ನು ಏನು ತಿಳ್ಕೊಂಡಿದ್ದೀರಿ?,ಏನೂ ತಪ್ಪು ಮಾಡದ ಕಲ್ಲಬೆಟ್ಟು ಸಿಇಒ ಅವರನ್ನು ಡಿಮೋಷನ್ ಮಾಡಿದ್ದೀರೇಕೆ? ನಿಮಗೆ ಕಂಪ್ಲೆಂಟ್ ಯಾರದ್ದು? ಡಿಮೋಷನ್ ಮಾಡಲು ನಿಮಗೆ ಅಧಿಕಾರ ಇದೆಯಾ? ನಿಮ್ಮ ಮೇಲೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ, ಕೂಡಲೇ ಆ ಆದೇಶವನ್ನು ಹಿಂಪಡೆದು ಆಕೆಯನ್ನು ಕೆಲಸದಲ್ಲಿ ಮುಂದುವರಿಸಿ’
ಹೀಗೆ ಸಹಕಾರಿ ಇಲಾಖೆಯ ಏ.ಆರ್.ತ್ರಿವೇಣಿ ಅವರನ್ನು ತರಾಟೆಗೆ ತೆಗೆದುಕೊಂಡವರು ಶಾಸಕ ಉಮಾನಾಥ ಕೋಟ್ಯಾನ್.
ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಶನಿವಾರ ಬೆಳಿಗ್ಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಶೆಟ್ಟಿ ಅವರನ್ನು ದಿಢೀರ್ ಹಿಂಭಡ್ತಿ ನೀಡಿರುವುದನ್ನು ವಿರೋಧಿಸಿ ಕಲ್ಲಬೆಟ್ಟು ಪರಿಸರದ ಜನರು ಪಕ್ಷಬೇಧ ಮರೆತು ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ಕಳೆದ ಮೂವತ್ತು ವರ್ಷಗಳಿಂದ ಈ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ, ಸಿಇಒ ಆಗಿ ಕಾರ್ಯನಿರ್ವಹಿಸಿದ ಅನಿತಾ ಶೆಟ್ಟಿ ಅವರನ್ನು ಯಾವುದೇ ನೋಟೀಸು ನೀಡದೆ, ಯಾವುದೇ ಸೂಚನೆ ನೀಡದೆ ಅವರನ್ನು ಹಿಂಭಡ್ತಿಗೊಳಿಸಲಾಗಿದ್ದು ಇದು ಈ ಭಾಗದವರನ್ನು ಕೆರಳಿಸಿದೆ.
ಸಹಕಾರಿ ಇಲಾಖೆಯ ಮೇಲಾಧಿಕಾರಿಗಳು ಅವರಿಗೆ ಅನ್ಯಾಯ ಮಾಡಿದ್ದಾರೆ,ಯಾರದ್ದೋ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ, ಇದು ಕಾನೂನುಬಾಹಿರವಾಗಿದ್ದು ಆಡಳಿತಾಧಿಕಾರಿ ಅವರಿಗೆ ಹಿಂಭಡ್ತಿ ಆದೇಶ ಮಾಡಲು ಯಾವುದೇ ಅಧಿಕಾರವಿಲ್ಲ ಎಂದು ಹೇಳಲಾಗುತ್ತಿದೆ.






