2025-26 ನೇ ಸಾಲಿನ ಪ್ರಥಮ ಕಂಬಳ ಎಂಬ ಹೆಮ್ಮೆಯ ‘ಪಣಪಿಲ
ಜಯ-ವಿಜಯ ಜೋಡುಕರೆ ಕಂಬಳ’ವು ನ.15 ರಂದು ಹೊನಲು ಬೆಳಕಿನಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷರಾದ ನಂದೊಟ್ಟು ಪಣಪಿಲ ಯುವರಾಜ್ ಜೈನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಕೆಲ್ಲಪುತ್ತಿಗೆ ಗುತ್ತು ಸುಭಾಶ್ಚಂದ್ರ ಚೌಟ ಅವರು ‘ಈಗಾಗಲೇ ಕಳೆದ ಒಂದು ತಿಂಗಳಿಂದ ಕಂಬಳ ಕರೆ ಮತ್ತು ಆ ಪರಿಸರದಲ್ಲಿ ಕಂಬಳ ಸಮಿತಿ ಸದಸ್ಯರು ಮತ್ತು ಊರ ಸ್ವಯಂ ಸೇವಕರು ಕಂಬಳದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ, ಅಚ್ಚುಕಟ್ಟಿನ ವ್ಯವಸ್ಥೆಗಳು ನಡೆಯುತ್ತಿದೆ,ಕಂಬಳಕ್ಕೆ ಚಿತ್ರ ನಿರ್ಮಾಪಕ, ಉದ್ಯಮಿ ಲಾಂಚುಲಾಲ್ ಹಾಗೂ ದಾನಿಗಳ ನೆರವಿನಿಂದ ಪ್ರೋತ್ಸಾಹದೊಂದಿಗೆ ಕಂಬಳ ಯಶಸ್ವಿಯಾಗಿ ನಡೆಯಲಿದೆ ಎಂದರು.
ಸುಮಾರು 160 ಜತೆ ಕೋಣಗಳು ಈ ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದ ಅವರು ಹಳ್ಳಿಯ ಕೂಟ ಎಂಬ ಕಂಬಳ ಇಂದಿಗೆ ಉಳಿದುಕೊಂಡಿದೆ ಎಂದರೆ ಅದು ಪಣಪಿಲ ಕಂಬಳ ಎಂದು ಹೇಳಿದರು.
ಉಪಾಧ್ಯಕ್ಷ ಮುನಿರಾಜ್ ಹೆಗ್ಡೆಯವರು ಕಂಬಳ ಪ್ರೋತ್ಸಾಹಕರ ಕುರಿತು ಮಾಹಿತಿ ನೀಡಿದರು.
ಪ್ರಧಾನ ಕಾರ್ಯದರ್ಶಿ ಅಶ್ವಥ್ ಕೆ.ಪಣಪಿಲ ಅವರು ಸ್ವಾಗತಿಸಿ ಪಣಪಿಲ ಕಂಬಳದ ಕುರಿತು ಮತ್ತು ಅಲ್ಲಿನ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು.






