ಇತ್ತೀಚೆಗೆ ನಡೆದ ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೇಶವ ಪೂಜಾರಿ ಅವರನ್ನು ಎಲ್ಲಾ ಜವಾಬ್ದಾರಿಗಳಿಂದ ಬಿಜೆಪಿ ಉಚ್ಚಾಟಿಸಿದೆ.
ಕಲ್ಲಮುಂಡ್ಕೂರು ಸೊಸೈಟಿ ಗೆ ನಡೆದ ಚುನಾವಣೆಯಲ್ಲಿ ಹತ್ತು ಮಂದಿ ಬಿಜೆಪಿ ಬೆಂಬಲಿತರು ಮತ್ತು ಇಬ್ಬರು ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದರು.

ಅಧ್ಯಕ್ಷರನ್ನಾಗಿ ವಿದ್ಯಾನಂದ ಶೆಟ್ಟಿ ಹಾಗೂ ಉಪಾಧ್ಯಕ್ಷರನ್ನಾಗಿ ಸುಧಾಕರ ಪೂಜಾರಿ ಅವರನ್ನು ಆಯ್ಕೆಗೊಳಿಸುವುದೆಂದು ಪಕ್ಷ ತೀರ್ಮಾನಿಸಿತ್ತು. ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಪಕ್ಷ ಪ್ರಮುಖರ ಆಯ್ಕೆ ಕೂಡಾ ಅವರಿಬ್ಬರೇ ಆಗಿದ್ದರೆನ್ನಲಾಗಿದೆ.
ಆದರೆ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎನ್ನುವ ಅಸಮಾಧಾನದಿಂದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ವೇಳೆ ಆಕಾಂಕ್ಷಿಯಾಗಿದ್ದ ಕೇಶವ ಪೂಜಾರಿ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಈ ಚುನಾವಣೆಯಲ್ಲಿ 9 ಮತಗಳನ್ನು ಪಡೆದ ಕೇಶವ ಪೂಜಾರಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದೀಗ ಎರಡೇ ದಿನಗಳ ಅಂತರದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕೇಶವ ಪೂಜಾರಿ ಅವರನ್ನು ಬಿಜೆಪಿ ಉಚ್ಚಾಟಿಸಿದೆ.
ಕೇಶವ ಪೂಜಾರಿ ಅವರು ಪಕ್ಷವಿರೋಧಿ ಚಟುವಟಿಕೆ ಮಾಡಿದ್ದು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಜೆಪಿಯ ಎಲ್ಲಾ ಜವಾಬ್ದಾರಿಗಳಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಮೂಲ್ಕಿ ಮೂಡುಬಿದಿರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್ ಅವರು ತಿಳಿಸಿದ್ದಾರೆ.






