ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಮಂಗಳೂರಿನ ಪದ್ಮರಾಜ್ ಆರ್.ಪೂಜಾರಿ ಅವರು ಆಯ್ಕೆಯಾಗಿದ್ದಾರೆ.
ಕಳೆದ ಕೆಲವು ಸಮಯಗಳಿಂದ ಜಿಲ್ಲಾಧ್ಯಕ್ಷರ ಆಯ್ಕೆಗೆ ಹಲವು ರೀತಿಯ ಕಸರತ್ತುಗಳು ನಡೆಯುತ್ತಿತ್ತು.
ಹಲವು ಮಂದಿ ಆಕಾಂಕ್ಷಿಗಳಿದ್ದರೂ ಅಂತಿಮವಾಗಿ ಮಿಥುನ್ ರೈ ಮತ್ತು ಪದ್ಮರಾಜ್ ಪೂಜಾರಿಯವರ ಹೆಸರು ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.
ಕಾಂಗ್ರೆಸ್ ನ ಸಂಘಟನಾ ಸೃಜನ್ ಅಭಿಯಾನದಡಿ ಎಐಸಿಸಿ ವೀಕ್ಷಕರು ರಾಜ್ಯದ ಪ್ರತೀ ಜಿಲ್ಲೆಗಳಲ್ಲೂ ಸಂಚರಿಸಿ ಪದಾಧಿಕಾರಿಗಳು, ಪಕ್ಷದ ನಾಯಕರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷರಿಗೆ ಸಲ್ಲಿಸಿದ್ದು ಎಐಸಿಸಿ ಅಧ್ಯಕ್ಷರ ಅನುಮೋದನೆಯಂತೆ ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಕಳೆದ ರಾತ್ರಿ ರಾಜ್ಯದ ನೂತನ ಜಿಲ್ಲಾಧ್ಯಕ್ಷರುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದರು.ಅದರಲ್ಲಿ ದ.ಕ.ಜಿಲ್ಲೆಯಿಂದ ಪದ್ಮರಾಜ್ ಅವರ ಹೆಸರು ಪ್ರಕಟಗೊಂಡಿದ್ದು ಪದ್ಮರಾಜ್ ಅಭಿಮಾನಿ ಬಳಗದಲ್ಲಿ ಸಂತಸ ಉಂಟು ಮಾಡಿದೆ.
ವಕೀಲರಾಗಿರುವ ಇವರು ಕುದ್ರೋಳಿ ದೇವಸ್ಥಾನದ ಪ್ರಧಾನ ಪದಾಧಿಕಾರಿಯಾಗಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗಮನಸೆಳೆದಿದ್ದು ಬಳಿಕ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಯುವರಾಜನಿಗೆ ಅಧ್ಯಕ್ಷ ಪಟ್ಟ ನೀಡಿರುವುದರಿಂದ ಮತ್ತು ಕಾಂಗ್ರೆಸ್ ಪಕ್ಷವು ಬಿಲ್ಲವ ಸಮುದಾಯಕ್ಕೆ ಅವಕಾಶ ನೀಡಿರುವುದು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ಗಟ್ಟಿಯಾಗಲು ನೀಡಿರುವ ಜವಾಬ್ದಾರಿಯಾಗಿದೆ.








































