“ಕ್ರೈಸ್ತ ಧರ್ಮವು ಸೌಹಾರ್ದ ಬದುಕನ್ನು ಕಟ್ಟಿಕೊಳ್ಳಲು ಕಲಿಸುತ್ತದೆ, ಶಿಕ್ಷಣ, ಆರೋಗ್ಯ ಹಾಗೂ ಸೇವೆಯಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಈ ದರ್ಮವು ಗುರುತಿಸಿಕೊಂಡಿದೆ” ಎಂದು ಮೂಡುಬಿದಿರೆ ಜೈನಮಠದ ಭಾರತಭೂಷಣ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರು ಹೇಳಿದರು.
ಮೂಡುಬಿದಿರೆ ಅಲಂಗಾರು ಸಂತ ಥೋಮಸ್ ವಿದ್ಯಾ ಸಂಸ್ಥೆಗಳು ಹಾಗೂ ಅಲಂಗಾರು ಹೋಲಿ ರೋಸರಿ ಚರ್ಚ್ ವತಿಯಿಂದ ಶನಿವಾರ ನಡೆದ ‘ಬಂಧುತ್ವ ಕ್ರಿಸ್ಮಸ್- ಸ್ನೇಹಕೂಟ’ ಕಾರ್ಯಕ್ರಮ ದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಲಂಗಾರು ಚರ್ಚ್ ನ ಧರ್ಮಗುರುಗಳಾದ ರೆ.ಫಾ.ಮೆಲ್ವಿನ್ ನೊರೋನ್ಹ ಅವರು ‘ಧರ್ಮ ಎಲ್ಲರಿಗೂ ಪವಿತ್ರವಾದುದು,ಮಾನವ ಧರ್ಮವೇ ಶ್ರೇಷ್ಠ, ನಾವು ನಮ್ಮ ಧರ್ಮವನ್ನು ಪ್ರೀತಿಸಿ ಇತರ ಧರ್ಮವನ್ನು ಗೌರವಿಸಿದಾಗ ಮಾನವೀಯತೆ, ಸಹೋದರತೆ,ಸಹಬಾಳ್ವೆ ಕಾಣಲು ಸಾಧ್ಯ’ ಎಂದರು.
ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ,ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಅಬ್ದುಸ್ಸಲಾಮ್ ಬೂಟ್ ಬಝಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಪುರಸಭಾ ಸದಸ್ಯ ಪಿ.ಕೆ.ಥೋಮಸ್, ಪುರಸಭಾ ನಾಮ ನಿರ್ದೇಶಿತ ಸದಸ್ಯ ಕ್ಲಾರಿಯೋ ಸುಶ್ಮಿತ್ ಡಿಸೋಜ, ಮೌಂಟ್ ರೋಸರಿಯ ಮದರ್ ಜನರಲ್ ಸಿ.ಸುನೀತಾ, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಲಾರೆನ್ಸ್ ಡಿಕುನ್ಹ,ಶಾಲಾ ಆಡಳಿತ ಮಂಡಳಿಯ ಎಡ್ವರ್ಡ್ ಸೆರಾವೊ,ಜೆನೆಟ್ ಮಿರಾಂದ,ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಲ್ವಿಯಾ ಡೇಸಾ,ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಅಲ್ಫೋನ್ಸಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಲಂಗಾರು ಚರ್ಚ್ ನ 21 ಆಯೋಗಗಳ ಸಂಚಾಲಕ ರಾಜೇಶ್ ಕಡಲಕೆರೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ರೋಡ್ರಿಗಸ್ ವಂದಿಸಿದರು. ಶಿಕ್ಷಕರಾದ ಸೂರ್ಯನಾರಾಯಣ ಭಟ್ ಹಾಗೂ ಕುಸುಮಾ ಅವರು ಕಾರ್ಯಕ್ರಮ ನಿರೂಪಿಸಿದರು.






