ಮೂಡುಬಿದಿರೆ ಸಮೀಪದ ಪಟ್ಟಾಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಹಾಜಿ ಮಲಂಗ್ ಇಂಟರ್ ನ್ಯಾಷನಲ್ ಗರ್ಲ್ಸ್ ಕ್ಯಾಂಪಸ್ ನ ಉದ್ಘಾಟನೆ ಇತ್ತೀಚೆಗೆ ನಡೆಯಿತು.
ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ನೂತನ ಕ್ಯಾಂಪಸನ್ನು ಉದ್ಘಾಟಿಸಿ ” ಈ ಭಾಗದ ಮತ್ತು ಇತರ ಭಾಗಗಳ ವಿದ್ಯಾರ್ಥಿನಿಯರ ಅವಶ್ಯಕತೆಗನುಗುಣವಾಗಿ ಹಾಜಿ ಮಲಂಗ್ ಟ್ರಸ್ಟ್ ಮೂಲಕ ಈ ಹೊಸ ಸಂಸ್ಥೆಯನ್ನು ನಿರ್ಮಿಸಿದೆ, ಮೂಡುಬಿದಿರೆಯಂತಹ ಬೆಳೆಯುತ್ತಿರುವ ನಗರದ ಸ್ವಲ್ಪ ಹೊರ ವಲಯದಲ್ಲಿ ಈ ಕ್ಯಾಂಪಸ್ ನಿರ್ಮಾಣವಾಗಿರುವುದು ಬಹಳಷ್ಟು ಜನರಿಗೆ ಉಪಯೋಗಿಯಾಗಿದೆ, ಸಂಸ್ಥೆ ಬೆಳೆಯಲಿ” ಎಂದು ಹಾರೈಸಿದರು.
ತ್ವಯಿಬಾ ಮರ್ಕಝ್ ಹಾಜಿ ಮಲಂಗ್ ಕ್ಯಾಂಪಸ್ ನ ಅಧ್ಯಕ್ಷರಾದ ಸಯ್ಯದ್ ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ಅವರು ಅಧ್ಯಕ್ಷತೆ ವಹಿಸಿ ದುವಾ ನೆರವೇರಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ, ಸೌದಿ ಅರೇಬಿಯಾದ ಅಯ್ಯೂಬ್ ಅಹ್ಮದ್,ಶ್ರೀ ಕ್ಷೇತ್ರ ಪಡ್ಯಾರಬೆಟ್ಟದ ಧರ್ಮದರ್ಶಿ ಜೀವಂಧರ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್,ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ,ಜಿ.ಪಂ.ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್,ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಬಂಗೇರ,ಪೆರಿಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎನ್.ಸೀತಾರಾಮ ರೈ,ಪೆರಿಂಜೆಗುತ್ತು ಜಯರಾಜ್ ಕಂಬಳಿ,ಹೊಸಂಗಡಿ ಗ್ರಾ.ಪಂ.ಪ್ರಭಾರ ಪಿ.ಡಿ.ಒ.ಕಾಂರಪ್ಪ, ಆರಂಬೋಡಿ ಪಿ.ಡಿ.ಒ.ಗಣೇಶ್ ಶೆಟ್ಟಿ,ಪ್ರಗತಿಪರ ಕೃಷಿಕ ಶಂಕರ ಭಟ್ ಬಾಲ್ಯ ಗ್ರಾ.ಪಂ.ನಿಕಟ ಪೂರ್ವ ಸದಸ್ಯ ಆನಂದ ಬಂಗೇರ ಕೋಡಿಂಗೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಪವಿತ್ರ ಹಜ್ ಯಾತ್ರೆಗೆ ತೆರಳಲಿರುವ ಸಂಸ್ಥೆಯ ಅಧ್ಯಕ್ಷ ಸಾದಾತ್ ತಂಙಳ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ತ್ವಯಿಬಾ ಮರ್ಕಝ್ ಸಲಹಾ ಸಮಿತಿಯ ಅಧ್ಯಕ್ಷ ಆಲಿಯಬ್ಬ ಪೂಲಬೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಅಶ್ರಫ್ ಆಲಿಕುಞ್ಞಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಪತ್ರಕರ್ತ ಎಚ್.ಮುಹಮ್ಮದ್ ವೇಣೂರು ವಂದಿಸಿದರು.





