ಮನೆಯಲ್ಲಿ ಏಕಾಂಗಿ ಯುವತಿ ಇದ್ದ ಸಂದರ್ಭದಲ್ಲೇ ಆ ಮನೆಗೆ ನುಗ್ಗಿ ಕಪಾಟಿನಲ್ಲಿದ್ದ ಮೂರೂವರೆ ಲಕ್ಷ ರೂ ನಗದು ಹಾಗೂ 20 ಪವನ್ ಚಿನ್ನಾಭರಣವನ್ನು ಕದ್ದೊಯ್ದ ಘಟನೆ ಭಾನುವಾರ ಬೆಳಿಗ್ಗೆ ಅಳಿಯೂರಿನಲ್ಲಿ ನಡೆದಿದೆ.
ಅಳಿಯೂರಿನ ನೇಲಡೆ ಎಂಬಲ್ಲಿ ಈ ಘಟನೆ ನಡೆದಿದ್ದು ಹಗಲಿನ ಹೊತ್ತಲ್ಲೇ ನಡೆದ ಈ ಘಟನೆ ಈ ಪರಿಸರದಲ್ಲಿ ದೊಡ್ಡ ಪ್ರಕರಣವಾಗಿದೆ.
ಖ್ಯಾತ ಪಾಕತಜ್ಞರಾಗಿರುವ ಪ್ರಶಾಂತ್ ಜೈನ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು ಮನೆಯಲ್ಲಿ ಅವರ ಮಗಳ ಹೊರತಾಗಿ ಬೇರಾರೂ ಇರಲಿಲ್ಲ. ಪ್ರಶಾಂತ್ ಮತ್ತು ಅವರ ಮಗ ಮೂಲ್ಕಿಯಲ್ಲಿ ಅಡುಗೆ ಕೆಲಸಕ್ಕೆ ಹೋಗಿದ್ದು ಅವರ ಪತ್ನಿ ಶಿರ್ತಾಡಿಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು.
ಇದೇ ಸಮಯವನ್ನು ಅರಿತ ಕಳ್ಳರು ಆ ಮನೆಯೊಳಗೆ ನುಗ್ಗಿದ್ದಾರೆ.ಕಪಾಟು ಸದ್ದು ಕೇಳಿದಾಗ ಮನೆಯಿಂದ ಹೊರಬಂದ ಯುವತಿಗೆ ಬೊಬ್ಬೆ ಹೊಡೆಯದಂತೆ ಬಾಯಿಗೆ ಒತ್ತಿ ಹಿಡಿದರೆನ್ನಲಾಗಿದೆ.ಅಲ್ಲದೆ ಆಕೆಗೆ ಸ್ಪ್ರೇ ಹಾಕಿ ಪ್ರಜ್ಞೆ ತಪ್ಪಿಸಿ ದೋಚಿಕೊಂಡು ಹೋಗಿದ್ದಾರೆ.
ಬೆಳಿಗ್ಗೆ ಹತ್ತೂವರೆ ಗಂಟೆ ವೇಳೆಗೆ ಈ ಘಟನೆ ಸಂಭವಿಸಿದ್ದು ಮಧ್ಯಾಹ್ನ ಹನ್ನೆರಡೂವರೆ ವೇಳೆಗೆ ನೆರೆಮನೆಯಲ್ಲಿರುವ ಸಂಬಂಧಿಕ ಮಹಿಳೆ ಬಂದ ನಂತರವೇ ಆಕೆ ಎಚ್ಚರಗೊಂಡು ನಡೆದ ಘಟನೆಯನ್ನು ಅವರಲ್ಲಿ ವಿವರಿಸಿದ್ದಾಳೆನ್ನಲಾಗಿದೆ.
ಘಟನಾ ಸ್ಥಳಕ್ಕೆ ಪಣಂಬೂರು ಎಸಿಪಿ ಶ್ರೀಕಾಂತ್, ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ವಾನದಳ, ಪ್ರಾಯೋಗಿಕ ವಿಧಿ ವಿಜ್ಞಾನದವರೂ ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ.

ಇಬ್ಬರು ಮುಸುಕುಧಾರಿಗಳಿದ್ದರೆನ್ನಲಾಗಿದ್ದು ಸ್ಥಳೀಯ ಹಾಗೂ ಈ ಮನೆಯನ್ನು ಬಲ್ಲವರೇ ಈ ಕೃತ್ಯವೆಸಗಿರಬಹುದೆಂದು ಶಂಕಿಸಲಾಗಿದೆ.