ಕರಾವಳಿ ಜಿಲ್ಲೆಗಳಲ್ಲಿಂದು ಎದುರಾಗಿರುವ ಮರಳು ಸಮಸ್ಯೆ, ರೇಷನ್ ಕಾರ್ಡ್ ಹಾಗೂ 9-11 ಸಮಸ್ಯೆಗಳ ಕುರಿತು ವಿವರವಾಗಿ ಮಾತನಾಡಿದ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ತುಳು ಭಾಷೆಯನ್ನು ರಾಜ್ಯಭಾಷೆಯನ್ನಾಗಿ ಸೇರಿಸಲು ವಿಧಾನಸಭೆಯಲ್ಲಿ ಧ್ವನಿಯೆತ್ತಿ ಮತ್ತೊಮ್ಮೆ ಗಮನಸೆಳೆದಿದ್ದಾರೆ.
ವಿಧಾನಸಭಾಧಿವೇಶನದಲ್ಲಿ ಕರಾವಳಿ ಜಿಲ್ಲೆಗಳ ಸಮಸ್ಯೆಗಳ ಕುರಿತು ಚರ್ಚಿಸಲು ಅವಕಾಶ ಸಿಕ್ಕಾಗ ಸಭಾಧ್ಯಕ್ಷರ ಮುಂದೆ ಈ ಸಮಸ್ಯೆಗಳ ಕುರಿತು ಹೇಳುವ ಮೂಲಕ ಕೋಟ್ಯಾನ್ ಅವರು ಕರಾವಳಿಯ ಧ್ವನಿಯಾಗಿದ್ದಾರೆ.
ಜಿಲ್ಲೆಯಲ್ಲಿ ಸಾಕಷ್ಟು ಮರಳು ಇದೆ,ಹಿಂದೆಲ್ಲಾ ಸಾಂಪ್ರದಾಯಿಕವಾಗಿ ದೋಣಿ ಮೂಲಕ ಮರಳು ತೆಗೆದು ಕಡಿಮೆ ದರದಲ್ಲಿ ನೀಡಲಾಗುತ್ತಿತ್ತು,ಅದರಿಂದ ಮನೆ,ಕಟ್ಟಡ ಕಟ್ಟುವವರಿಗೆ ಪ್ರಯೋಜನವಾಗುತ್ತಿತ್ತು.ಈಗ ಬೇರೆ ಬೇರೆ ಯಂತ್ರಗಳ ಮೂಲಕ ಮರಳು ತೆಗೆಯುತ್ತಿರುವುದರಿಂದ ಒಂದಿಷ್ಟು ಗೊಂದಲ ಸೃಷ್ಟಿಯಾಗಿದೆ, ನಮ್ಮಲ್ಲಿ ಸಾಕಷ್ಟು ಮರಳು ಇದೆ,ಜನರಿಗದು ಅಗತ್ಯವೂ ಇದೆ,ಹಾಗಾಗಿ ಮರಳಿಗೆ ಒಂದು ಕಾನೂನು ರೂಪಿಸಿ ತೆಗೆಯಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.
ರೇಷನ್ ಕಾರ್ಡ್ ನ ಮತ್ತೊಂದು ಸಮಸ್ಯೆ. ಜನರು ದಿನಂಪ್ರತಿ ಅಲೆದಾಡುತ್ತಿದ್ದಾರೆ,ಯಾವಾಗ ನೋಡಿದರೂ ಸರ್ವರ್ ಸಮಸ್ಯೆ ಎಂದು ಜನರನ್ನು ಹಿಂದೆ ಕಳುಹಿಸಲಾಗುತ್ತಿದೆ, ಇದರಿಂದ ಜನರಿಗೆ ಕಷ್ಟವಾಗಿದ್ದು ಈ ಸಮಸ್ಯೆಗೆ ಶೀಘ್ರ ಪರಿಹಾರದ ಜೊತೆಗೆ 9-11 ಸಮಸ್ಯೆಗೂ ಪರಿಹಾರ ರೂಪಿಸಬೇಕೆಂದು ಆಗ್ರಹಿಸಿದ್ದಾರೆ.
ತುಳುನಾಡು,ತುಳುಭಾಷೆ,ತುಳು ಸಂಸ್ಕೃತಿಯ ಬಗ್ಗೆ ಸುದೀರ್ಘವಾದ ವಿವರ ನೀಡಿದ ಕೋಟ್ಯಾನ್ ಪಂಚದ್ರಾವಿಡ ಭಾಷೆಗಳಲ್ಲೊಂದಾದ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕರಾವಳಿಯ ಶಾಸಕರು,ತುಳುವರು ಹಲವಾರು ವರ್ಷಗಳಿಂದ ಹೋರಾಟ,ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ,ಅದಕ್ಕೆ ಪೂರಕವಾಗಿ ತುಳುವನ್ನು ರಾಜ್ಯ ಭಾಷೆಯನ್ನಾಗಿ ಸೇರಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
