‘ಮರಣ ಎನ್ನುವುದು ಪ್ರತಿಯೊಬ್ಬರಿಗೂ ನಿಶ್ಚಿತ, ಆದರೆ ಮರಣದ ನೆನಪೇ ನಮ್ಮಲ್ಲಿರುವುದಿಲ್ಲ, ಮರಣದ ಭಯ, ಪರಲೋಕದ ಭಯವಿಲ್ಲದೆ ಯುವ ಜನಾಂಗವಿಂದು ಅನಿಸ್ಲಾಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅತೀ ಖೇದದ ವಿಷಯ, ಯಾರ ಮರಣ ಎಲ್ಲಿ, ಹೇಗೆ ಸಂಭವಿಸುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ, ಮರಣದ ನೆನಪು ಸದಾ ನಮ್ಮಲ್ಲಿರಬೇಕು’ ಎಂದು ಮಾರಿಪಳ್ಳ ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಇಲ್ಯಾಸ್ ಅರ್ಶದಿ ಆತೂರು ಅವರು ಹೇಳಿದರು.
ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಇಹ್ಯಾವುಲ್ ಇಸ್ಲಾಂ ಸ್ವಲಾತ್ ಕಮಿಟಿಯ ಆಶ್ರಯದಲ್ಲಿ 28 ನೇ ವಾರ್ಷಿಕ ಸ್ವಲಾತ್ ಪ್ರಯುಕ್ತ ಹಮ್ಮಿಕೊಂಡ ಧಾರ್ಮಿಕ ಪ್ರಭಾಷಣದಲ್ಲಿ ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಲಾತ್ ಗೆ ದೊಡ್ಡದಾದ ಮಹತ್ವವಿದೆ, ಎಲ್ಲಿ ಸ್ವಲಾತ್ ಇರುತ್ತದೋ ಅಲ್ಲಿ ಬೆಳಕು, ನೆಮ್ಮದಿ, ಸಂತಸ,ಆರೋಗ್ಯ ಇರುತ್ತದೆ, ನೆಬಿಯವರ ಮೇಲೆ ಸ್ವಲಾತ್ ನಿತ್ಯವಾಗಿರಿಸಿದ್ದಲ್ಲಿ ಖಂಡಿತಾ ಯಶಸ್ಸು ಇದೆ ಎಂದವರು ಹೇಳಿದರು.
ಮಸೀದಿ ಕಮಿಟಿ ಅಧ್ಯಕ್ಷ ಎಂ.ಎಂ.ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಸೀದಿಯ ಖತೀಬರಾದ ಅಬ್ಬಾಸ್ ಫೈಝಿ ದಿಡುಪೆ ಅವರು ಉದ್ಘಾಟಿಸಿದರು.
ಗೌರವಾಧ್ಯಕ್ಷರಾದ ಮುಹಮ್ಮದ್ ದೋಣಿಬಾಗಿಲು, ಕಾರ್ಯದರ್ಶಿ ಝಕರಿಯಾ ಯೂಸುಫ್, ಮಕ್ಕಿ ಮಸೀದಿಯ ಖತೀಬರಾದ ಸಿರಾಜುದ್ದೀನ್ ಫೈಝಿ ಅಲ್ ಮ ಅಬರಿ, ಮಕ್ಕಿ ಮಸೀದಿಯ ಮುಅಝ್ಜಿನ್ ಇಸ್ಮಾಯಿಲ್ ಮುಸ್ಲಿಯಾರ್,ಇಹ್ಯಾವುಲ್ ಇಸ್ಲಾಂ ಸ್ವಲಾತ್ ಕಮಿಟಿ ಅಧ್ಯಕ್ಷ ಅಶ್ರಫ್ ಕಜೆ, ಕಾರ್ಯದರ್ಶಿ ಶಮೀರ್ ,ಜಮಾಲುದ್ದೀನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಾಲ್ಪಾಡಿ ಮುಅಝ್ಝಿನ್ ಹನೀಫ್ ಮುಸ್ಲಿಯಾರ್ ಕಿರಾಅತ್ ಪಠಿಸಿದರು. ಸದರ್ ಮುಅಲ್ಲಿಮ್ ಅಬ್ದುಲ್ ಹಕೀಮ್ ಅಶ್ರಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.










