ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ,ಮೈಸೂರು ಇಲ್ಲಿ ಇತ್ತೀಚೆಗೆ ನಡೆದ ಇಪ್ಪತ್ತೊಂದನೇ ಘಟಿಕೋತ್ಸವದಲ್ಲಿ ವಾಲ್ಪಾಡಿಯ ಉಮೇಶ್ ಭಟ್ ಅವರು ಸಂಸ್ಕೃತ ಎಂ.ಎ.ಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಚಿನ್ನದ ಪದಕದೊಂದಿಗೆ ಪ್ರಥಮ ರ್ಯಾಂಕ್ ಗೌರವವನ್ನು ಪಡೆದಿದ್ದಾರೆ.
ಫಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನಡೆಸುವ ಯೋಗದೀಪಿಕಾ ವಿದ್ಯಾಪೀಠದ ಹಳೆವಿದ್ಯಾರ್ಥಿಯಾಗಿರುವ ಇವರು ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯು ನಡೆಸುವ ಆಗಮ ಪರೀಕ್ಷೆಯಲ್ಲಿ ತಂತ್ರಸಾರ ವಿಭಾಗ ಮತ್ತು ವಾತುಲಾದಿ ವಿಭಾಗದ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಹೊಂದಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಪ್ರಸಿದ್ಧ ವೈದಿಕ ಮನೆತನದ ವೇ.ಮೂ. ದಿ. ಅಪ್ಪಯ್ಯ ಭಟ್ ಅವರ ಮೊಮ್ಮಗ ಹಾಗೂ ವೇ.ಮೂ.ಉಮಾಶಂಕರ್ ಭಟ್ ಅವರ ಪುತ್ರರಾಗಿರುವ ಇವರು ಶಿರ್ತಾಡಿ-ವಾಲ್ಪಾಡಿ ಗ್ರಾಮಗಳ ಶ್ರೀ ಅರ್ಜುನಾಪುರ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ತಂತ್ರಿಗಳಾಗಿ ಇತ್ತೀಚೆಗೆ ನಡೆದ ಬ್ರಹ್ಮಕಲಶೋತ್ಸವ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳ ಮುಂದಾಳುತ್ವ ವಹಿಸಿ ಕಾರ್ಯನಿರ್ವಹಿಸುತ್ತಿರುವ ಇವರು ಜ್ಯೋತಿಷಿಯಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ.
ಪೆರಿಬೆಟ್ಟು ಸ.ಹಿ.ಪ್ರಾ.ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು, ಬಾಬುರಾಜೇಂದ್ರ ಪ್ರಸಾದ್ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದಿರುವ ಇವರು ಏಳನೇ ಹಾಗೂ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದರು.










