ರವಿ ಅಂಚನ್. ರವಿಯಣ್ಣ ಅಂತಲೇ ಬೆದ್ರದ ಒಂಟಿಕಟ್ಟೆ ಪರಿಸರದಲ್ಲಿ ಫೇಮಸ್ ಹೆಸರು. ವೃತ್ತಿಯಲ್ಲಿ ಆಟೋ ಚಾಲಕ. ಹಿಂದೆ ಬಸ್ಸು ಚಾಲಕರಾಗಿದ್ದವರು.
ರಿಕ್ಷಾ ಓಡಿಸಿಯೇ ಜೀವನ ಸಾಗಿಸುತ್ತಿರುವ ಇವರದ್ದೊಂದು ಸ್ಪೆಷಾಲಿಟಿ ಏನೆಂದರೆ ತನ್ನೂರಿನ ಸುತ್ತಮುತ್ತ ಯಾರದ್ದಾದರೂ ಸಾವು ಸಂಭವಿಸಿದಾಗ ತನ್ನೆಲ್ಲಾ ಕೆಲಸಗಳನ್ನು ಬದಿಗೆ ಸರಿಸಿ ಅಲ್ಲಿಗೆ ಧಾವಿಸುವುದು.ಆ ದಿವಸ ಅದೆಷ್ಟು ದೂರದ ಬಾಡಿಗೆ ಇದ್ದರೂ ಹೋಗಲ್ಲ.ಸತ್ತವರ ಎಲ್ಲ ಅಂತ್ಯಕ್ರಿಯೆ
ಆಗಿಯೇ ಮುಂದಿನ ಕೆಲಸ.
ಯಾರದ್ದೇ ಸಾವು ಸಂಭವಿಸಲಿ, ಅದು ಯಾವ ಜಾತಿ- ಧರ್ಮ ಅಂತ ನೋಡಲ್ಲ . ಅಂತ್ಯಕ್ರಿಯೆಗಳೆಲ್ಲ ಮುಗಿಯುವವರೆಗೂ ಆ ಮನೆಯವರೊಂದಿಗೆ ನಿಂತು ಎಲ್ಲ ರೀತಿಯ ಸಹಕಾರವನ್ನು ನೀಡುತ್ತಾರೆ. ಹಾಗಂತ ಯಾರಿಂದಲೂ ನಯಾಪೈಸೆ ತಕೊಳ್ಳುವ ಮನುಷ್ಯ ಅಲ್ಲ.
ಅವರದ್ದು ಶುದ್ಧ ಮನಸ್ಸಿನ ಸೇವೆಯಿದು.ಯಾವತ್ತೂ ಹಣಕ್ಕಾಗಿ ಈ ಕೆಲಸ ಮಾಡಿದವರಲ್ಲ. ಇದೊಂದು ಶ್ರೇಷ್ಠ ಕೆಲಸವೆಂದೇ ನಂಬಿ ಕಳೆದ ಹಲವು ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.
ಇದರೊಟ್ಟಿಗೆ ದೈವ ದೇವರ ಕೆಲಸವನ್ನೂ ಮಾಡುತ್ತಾರೆ.
ದೈವ ದೇವರ ಕೆಲಸಕ್ಕೂ ಕೈ ಚಾಚುವವರಲ್ಲ. ಪ್ರಚಾರದ ಹಂಗಿಲ್ಲ.ತನ್ನಷ್ಟಕ್ಕೇ ಈ ಉಚಿತ ಸೇವೆಯನ್ನು ಮಾಡುತ್ತಿರುವ ರವಿ ಅಂಚನ್ ಅವರ ಬಗ್ಗೆ ಒಂಟಿಕಟ್ಟೆ ಪರಿಸರದಲ್ಲಿ ಯಾರಲ್ಲಾದರೂ ಕೇಳಿದರೆ ಅವರ ಈ ನಿಸ್ವಾರ್ಥ ಸೇವೆಯನ್ನು ವಿವರಿಸುತ್ತಾರೆ.
ವಿಪರ್ಯಾಸ ಏನೆಂದರೆ, ಕಳೆದ ಹಲವು ವರ್ಷಗಳಿಂದ ಏನನ್ನೂ ಬಯಸದೆ ಸ್ವಾರ್ಥ ಇಲ್ಲದ ಈ ಸೇವೆಯನ್ನು ಮಾಡುತ್ತಿರುವ ರವಿಯಣ್ಣರವರನ್ನು ಗುರುತಿಸಿ ಗೌರವಿಸಿದವರು ಕಡಿಮೆ.
ಹಾಗಂತ ಅವರೇನೂ ಸನ್ಮಾನ, ಗೌರವಕ್ಕಾಗಿ ಬಯಸಿದವರಲ್ಲ.ಆದರೆ, ಇಂತಹ ಅಪರೂಪದ ಸೇವಕನನ್ನು ಗುರುತಿಸಿ ಗೌರವಿಸುವುದು ಸಂಘ ಸಂಸ್ಥೆಗಳ ಕರ್ತವ್ಯ.






