ಪಾಲಡ್ಕ ಗ್ರಾಮದ ಕೇಮಾರು ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಣ್ಣಿನ ಕ್ವಾರಿ ಹಾಗೂ ಹೊರರಾಜ್ಯಗಳಿಗೆ ಮಣ್ಣು ಸಾಗಿಸುವ ಬೃಹತ್ ಲಾರಿಗಳ ಸಂಚಾರವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಆದೇಶಿಸಬೇಕೆಂದು ಆಗ್ರಹಿಸಿ ಕೇಮಾರು ಹಿತರಕ್ಷಣಾ ವೇದಿಕೆಯು ತಹಶೀಲ್ದಾರ್ ,ಪಿಡಿಒ,ಅರಣ್ಯ ಇಲಾಖೆ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಅವರಿಗೆ ಮನವಿ ನೀಡಿದೆ.



ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಮಾರಿನ ಆಲಿಸ್ ಸೆರಾವೊ,ಸೈಮನ್ ಕೊಟ್ಟೆರೊ ಎಂಬವರಿಗೆ ಸೇರಿದ ಸುಮಾರು ಎಕರೆ ಜಾಗದಲ್ಲಿ ಈ ಮಣ್ಣಿನ ಕ್ವಾರಿ ನಡೆಯುತ್ತಿದೆ.ಇಲ್ಲಿಂದ ಮಣ್ಣು ತುಂಬಿಕೊಂಡು ಹೋಗುವ ಬೃಹತ್ ಗಾತ್ರದ ಲಾರಿಗಳಿಂದ ಕೇಮಾರು- ಮೂಡುಬಿದಿರೆ ರಸ್ತೆ ಸಂಪೂರ್ಣ ಲಗಾಡಿ ಹೋಗಿದೆ, ಬೃಹತ್ ಲಾರಿಗಳ ಚಾಲಕರು ಊರಿನ ಕೆಲವು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದೆ ಉದ್ಧಟತನದಿಂದ ವರ್ತಿಸುವುದು , ಈ ಬೃಹತ್ ವಾಹನಗಳ ಸಂಚಾರದಿಂದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ, ವಾಹನಗಳಿಗೆ ಸಮಸ್ಯೆಯಾಗುತ್ತಿದೆ, ಆದುದರಿಂದ ಊರಿಗೆ ಅನ್ಯಾಯ ಮಾಡುವ ಇಲ್ಲಿನ ಮಣ್ಣಿನ ಕ್ವಾರಿಯನ್ನು ಸ್ಥಗಿತಗೊಳಿಸಿ ಬೃಹತ್ ಗಾತ್ರದ ವಾಹನಗಳ ಸಂಚಾರವನ್ನೂ ಕೂಡಲೇ ನಿಲ್ಲಿಸುವಂತೆ ಆದೇಶಿಸಬೇಕೆಂದು ಕೇಮಾರು ಹಿತರಕ್ಷಣಾ ವೇದಿಕೆ ಮನವಿಯಲ್ಲಿ ಆಗ್ರಹಿಸಿದೆ.








































