ಈ ಋತುವಿನ ಪ್ರಪ್ರಥಮ ಕಂಬಳ ಪಣಪಿಲ ‘ ಜಯ -ವಿಜಯ’ ಜೋಡುಕರೆ ಕಂಬಳವು ನ.9 ರಂದು ನಡೆಯಲಿದೆ ಎಂದು ಜಿಲ್ಲಾ ಕಂಬಳ ತೀರ್ಪುಗಾರರ ಸಮಿತಿಯ ಸಂಚಾಲಕರಾದ ವಿಜಯಕುಮಾರ್ ಕಂಗಿನಮನೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹದಿನೈದನೇ ವರ್ಷದ ಹೊನಲುಬೆಳಕಿನಲ್ಲಿ ನಡೆಯಲಿರುವ ಕಂಬಳವನ್ನು ಪಣಪಿಲ ಅರಮನೆ ವಿಮಲ್ ಕುಮಾರ್ ಶೆಟ್ಟಿ ಅವರು ಉದ್ಘಾಟಿಸಲಿದ್ದು ಕಂಬಳ ಸಮಿತಿಯ ಗೌರವಾಧ್ಯಕ್ಷರು,ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ,ಕಂಬಳ ಸಮಿತಿಯ ಅಧ್ಯಕ್ಷರಾದ ಯುವರಾಜ್ ಜೈನ್ ,ನಂದೊಟ್ಟು ಪಣಪಿಲ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಹೇಳಿದರು.
ಜೂನಿಯರ್ ಹಾಗೂ ಸಬ್ ಜೂನಿಯರ್ ವಿಭಾಗದಲ್ಲಿ ಕಂಬಳ ನಡೆಯಲಿದ್ದು ಇದರಿಂದ ಹೊಸ ಯುವಕರಿಗೆ ಓಟಗಾರನಾಗಲು ಅವಕಾಶ ಸಿಗಲಿದೆ,ಪ್ರಸಿದ್ಧ ಓಟಗಾರರು ಇದರಲ್ಲಿ ಭಾಗವಹಿಸುವುದಿಲ್ಲವಾದ್ದರಿಂದ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಸಿಕ್ಕಿ ಮುಂದೆ ಬೇರೆ ಬೇರೆ ವಿಭಾಗದ ಕಂಬಳದಲ್ಲಿ ಭಾಗವಹಿಸಲು ಅನುಕೂಲವಾಗಲಿದೆ ,ಗ್ರಾಮೀಣ ಭಾಗದ ಜನರಿಗೂ ಈ ಕಂಬಳ ಒಂದು ವಿಶೇಷ ಅವಕಾಶ ಒದಗಿಸಿಕೊಡಲಿದೆ ಎಂದರು.
ಈಗಾಗಲೇ ಕಂಬಳ ಕರೆಯ ಕೆಲಸಗಳು ನಡೆಯುತ್ತಿದೆ,ಊರಿನ ಯುವಕರು ಈ ಕೆಲಸದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಈ ಕಂಬಳದಲ್ಲಿ ಮಂತ್ರಿಗಳು, ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದು ಮರುದಿನ ಸಮಾರೋಪ ಸಮಾರಂಭ ನಡೆಯಲಿದೆ ಎಂದವರು ಮಾಹಿತಿ ನೀಡಿದರು.
ಕಂಬಳ ಸಮಿತಿಯ ಅಧ್ಯಕ್ಷರಾದ ಯುವರಾಜ್ ಜೈನ್,ಪ್ರಧಾನ ಕಾರ್ಯದರ್ಶಿ ಅಶ್ವಥ್ ಕೆ.ಪಣಪಿಲ, ಕಾರ್ಯಾಧ್ಯಕ್ಷರಾದ ಸುಭಾಶ್ಚಂದ್ರ ಚೌಟ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
