ಮೂಡುಬಿದಿರೆ ತಾಲೂಕು ಪಡುಕೊಣಾಜೆ ಗ್ರಾಮದಲ್ಲಿ ಸುಮಾರು 45 ಎಕ್ರೆ ಜಾಗವನ್ನು ಸರಕಾರ ವಕ್ಫ್ ಗೆ ಮೀಸಲಿಟ್ಟಿದೆ ಎಂದು ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ಧಿ ಹಬ್ಬಿಸಿ ಸಾರ್ವಜನಿಕವಾಗಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸುತ್ತಿದೆ ಎಂದು ಮೂಡುಬಿದಿರೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ಆರೋಪಿಸಿದ್ದಾರೆ.
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು’ ಈ ಸುದ್ಧಿಯ ಕುರಿತಾಗಿ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಯು ಕಂದಾಯ ಅಧಿಕಾರಿಗಳಲ್ಲಿ ವಿವರಣೆ ಕೇಳಿದ್ದು,ಅಧಿಕಾರಿಗಳು ಇದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ’ ಎಂದರು.
ಸಿದ್ಧರಾಮಯ್ಯ ಸರಕಾರ ಜನಪರ ಯೋಜನೆಗಳನ್ನು ಬಡವರಿಗೆ ನೀಡಿದ್ದು ಅದು ಸಮರ್ಪಕವಾಗಿ ಬಡವರಿಗೆ ಸಿಗುತ್ತಿದೆ,ಇದನ್ನು ಸಹಿಸದ ಬಿಜೆಪಿ ಈ ರೀತಿಯ ಸುಳ್ಳು ಸುದ್ಧಿ ಹಬ್ಬಿಸಿ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಕೈ ಹಾಕಿದೆ,ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಇದನ್ನು ಸಂಪೂರ್ಣವಾಗಿ ಖಂಡಿಸುತ್ತದೆ ಎಂದವರು ಹೇಳಿದರು.
ಸಮಿತಿ ಸದಸ್ಯ ಶಿವಾನಂದ ಪಾಂಡ್ರು ಮಾತನಾಡಿ’ ಬಿಜೆಪಿಯವರ ಆರೋಪಕ್ಕೆ ಸರಿಯಾದ ದಾಖಲೆ ನೀಡಲಿ,ಕಂದಾಯ ಅಧಿಕಾರಿಗಳೇ ಇಲ್ಲವೆಂದ ಮೇಲೆ ಇವರು ಸುಳ್ಳು ಸುದ್ಧಿ ಹಬ್ಬಿಸುತ್ತಿರುವುದೇಕೆ? ಹಾಗೆ ನೋಡಿದರೆ ರೈತರ ಮುಖಂಡ ಎಂದುಕೊಳ್ಳುವವರೊಬ್ಬರು ಸುಮಾರು 25 ಎಕರೆ ಸರಕಾರಿ ಜಾಗವನ್ನು ಕಬಳಿಸಿದ್ದಾರೆ ,ಅದರ ಬಗ್ಗೆಯೂ ತನಿಖೆಯಾಗಲಿ ಎಂದರಲ್ಲದೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳನ್ನು ಸಹಿಸಿಕೊಳ್ಳದೆ ಬಿಜೆಪಿ ಇಂತಹ ಆರೋಪ ಮಾಡುತ್ತಿದೆ ಎಂದರು.
ಸಮಿತಿ ಸದಸ್ಯೆ ರಜನಿ ಪಡುಮಾರ್ನಾಡು, ಕಾಂಗ್ರೆಸ್ ಮುಖಂಡ ಸುಕುಮಾರ್ ಜೈನ್ ಅಳಿಯೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
