ನೆಲ್ಲಿಕಾರಿನಲ್ಲಿ ಕಳೆದ ಶುಕ್ರವಾರ ಮತ್ತು ಶನಿವಾರ ನಡೆದ ಪ್ರಕರಣಕ್ಕೆ ನಿಜವಾದ ಕಾರಣ ತಿಳಿದುಬಂದಿದೆ.
ನೆಲ್ಲಿಕಾರಿನ ಮನೆಯೊಂದರಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಪದ್ಮಾವತಿ ಎಂಬವರ ಮನೆಗೆ ಅದೇ ಪರಿಸರದ ರಿಕ್ಷಾ ಚಾಲಕ ಸತೀಶ್ ಶೆಟ್ಟಿ ಎಂಬಾತ ಪ್ರತಿನಿತ್ಯ ಹೋಗಿಬರುತ್ತಿದ್ದ. ಆಕೆಯನ್ನು ಬ್ಯಾಂಕ್ ಹಾಗೂ ಅಂಗಡಿಗೆ ಕರೆದೊಯ್ಯಲು, ಎಲ್ಲಿಗಾದರೂ ಹೋಗಲಿಕ್ಕಿದ್ದರೆ ಇದೇ ಸತೀಶ್ ಶೆಟ್ಟಿಯ ರಿಕ್ಷವೇ ಬೇಕಾಗಿತ್ತು.ಅವರಿಬ್ಬರೂ ಪರಸ್ಪರ ಆತ್ಮೀಯರಾಗಿದ್ದು ಸಂಜೆವೇಳೆಗೆ ಒಟ್ಟಿಗೆ ಕುಳಿತು ಕುಡಿಯುತ್ತಿದ್ದರು. ಮಹಿಳೆಗೆ ಆತನ ಮೇಲೆ ವಿಶ್ವಾಸವಿತ್ತು.
ಎಪ್ಪತ್ತರ ಏಕಾಂಗಿ ಮನೆಯಲ್ಲಿ ಆಕೆಯ ಹಳೆಯದಾದ ಕೆಲವು ಬಂಗಾರಗಳು ಇರುವುದು ಆತನ ಗಮನಕ್ಕೆ ಬಂದಿದೆ.ಅದಕ್ಕಾಗಿ ಆತ ಕಾಯುತ್ತಿದ್ದ.
ಮೊನ್ನೆಯ ದಿನವೂ ಅವರಿಬ್ಬರೂ ಒಟ್ಟಿಗೆ ಕುಳಿತು ಕುಡಿದಿದ್ದಾರೆ. ಆದರೆ ಮರುದಿನ ಬೆಳಿಗ್ಗೆ ಪದ್ಮಾವತಿ ಅವರು ಬಾವಿಯಲ್ಲಿದ್ದರು.
ಆಕೆಯನ್ನು ಬಾವಿಗೆ ದೂಡಿಹಾಕಿ ಸತೀಶ್ ಶೆಟ್ಟಿ ಮನೆಯಲ್ಲಿದ್ದ ಬಂಗಾರಗಳನ್ನು ದೋಚಿದ್ದ. ಆಕೆ ಮೃತಪಟ್ಟಿದ್ದಾರೆಂದೇ ಭಾವಿಸಿದ್ದ.ಯಾವಾಗ ಆಕೆ ಬದುಕಿದ್ದಾರೆಂದು ಗೊತ್ತಾಯಿತಾ….ತನ್ನನ್ನು ಪೊಲೀಸರು ಹುಡುಕುತ್ತಿರಬಹುದೆಂದು ತಿಳಿಯಿತಾ….ಆ ಕೂಡಲೇ ತನ್ನ ರಿಕ್ಷಾ ಸ್ಟಾರ್ಟ್ ಮಾಡಿಕೊಂಡು ಪಕ್ಕದ ರೆಂಜಾಳ ಹಾಡಿಯತ್ತ ತೆರಳಿ ಅಲ್ಲಿ ಯಾವುದೋ ವಿಷ ಪದಾರ್ಥ ಸೇರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೋಚಿದ್ದ ಬಂಗಾರ ಆತನ ರಿಕ್ಷಾದಲ್ಲಿ ಪತ್ತೆಯಾಗಿರುವುದರಿಂದ ಈ ಪ್ರಕರಣದ ಸತ್ಯಾಂಶ ಹೊರಬಿದ್ದಿದೆ.
ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





