ಮೂಡುಬಿದಿರೆ: ಯಾವುದೇ ಒಂದು ಸಂಘ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಲು ನಾಯಕತ್ವದ ಜಾವಬ್ದಾರಿಯನ್ನು ವಹಿಸಿಕೊಂಡವರು ಎಲ್ಲರನ್ನು ಒಗ್ಗೂಡಿಸಿಕೊಂಡು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಬೇಕು. ಹಾಗಾಗಿ ಫಲ್ಗುಣಿ ಯುವಕ ಮಂಡಲ ಇಂದು ಆರಂಭವಾಗಿ ೩೭ ವರ್ಷವಾದರೂ ಹೊಸ ಯುವಪೀಳಿಗೆಗೆ ಮುನ್ನಡೆಸುವ ಅವಕಾಶವನ್ನು ಮಾಡಿಕೊಟ್ಟು, ರಾಜಕೀಯರಹಿತವಾದ ಸಂಘವನ್ನು ಕಟ್ಟಿ ಇಂದು ಅಸಹಾಯಕರಿಗೆ ಸಹಾಯಹಸ್ತ, ಸ್ಥಳೀಯ ಶಾಲಾ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ ಎಂದು ದಿನೇಶ್ ಪೂಜಾರಿ ಕಟ್ಟಣಿಗೆ ಹೇಳಿದರು.
ಅವರು ಮಂಗಳವಾರ ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಮಹೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಫಲ್ಗುಣಿ ಯುವಕ ಮಂಡಲದ ೩೭ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿವಿಧ ಸಾಂಸ್ಕçತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಇರುವೈಲು ಶಾಲೆಯಿಂದ ವರ್ಗಾವಣೆಗೊಂಡ ದೈಹಿಕ ಶಿಕ್ಷಕ ಪ್ರೇಮಾನಂದ ಹಾಗೂ ಹಿರಿಯ ದೈವ ಪರಿಚಾರಕ, ಯಕ್ಷಗಾನ ಕಲಾವಿದ ಸಂಜೀವ ಭಂಡಾರಿ ಇರುವೈಲು ಸನ್ಮಾನಿಸಿ , ರಾಜ್ಯಮಟ್ಟದಲ್ಲಿ ಜಂಪ್ ರೋಪ್ ಸ್ಪರ್ಧೆಯಲ್ಲಿ ಆಯ್ಕೆಯಾದ ಪವನ್ ಎಸ್, ಸಾನಿಧ್ಯ, ಸಾನ್ವಿ ಅವರನ್ನು ಗುರುತಿಸಿ ಗೌರವಿಸಲಾಯಿತು.
ವಾಣಿಜ್ಯ ಶಾಸ್ತ್ರದ ಉಪನ್ಯಾಸಕಿ ಚೇತನಾ ರಾಜೇಂದ್ರ ಹೆಗ್ಡೆ ಪುತ್ತಿಗೆಮನೆ ಧಾರ್ಮಿಕ ಉಪನ್ಯಾಸ ನೀಡಿದರು.
ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ನಾಯ್ಕ್ ಶಿರ್ತಾಡಿ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಅಧ್ಯಕ್ಷ ಲಕ್ಷ್ಮೀಶ ನಾಯ್ಕ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಧನಂಜಯ್ ಶೆಟ್ಟಿ ಸ್ವಾಗತಿಸಿ, ಬಾಲಕೃಷ್ಣ ಸುವರ್ಣ ವಾರ್ಷಿಕ ವರದಿ ವಾಚಿಸಿದರು, ಪ್ರಸಾದ್ ಶೆಟ್ಟಿ ದೊಡ್ಡಗುತ್ತು ನಿರೂಪಿಸಿ , ಶುಭಕರ ಸಾಲ್ಯಾನ್ ಧನ್ಯವಾದಗೈದರು.
