ನವಜಾತ ಶಿಶುವಿನ ಹೃದಯ ಸಂಬಂಧಿ ಚಿಕಿತ್ಸೆಗೆ ಮಂಗಳೂರಿನಿಂದ ಬೆಂಗಳೂರಿಗೆ ಕೇವಲ 4.50 ಗಂಟೆಯಲ್ಲಿ ಅಂಬುಲೆನ್ಸ್ ನಲ್ಲಿ ಕರೆದೊಯ್ದ ಸುಳ್ಯದ ಅಂಬುಲೆನ್ಸ್ ಚಾಲಕನ ಬಗ್ಗೆ ವ್ಯಾಪಕ ಪ್ರಶಂಸೆಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅದು ಶ್ಲಾಘನೀಯವೂ ಹೌದು. ಆದರೆ ಆರೀತಿ ರವಾನಿಸಲು ಸಕಲ ರೀತಿಯ ವ್ಯವಸ್ಥೆ ಮಾಡಿಕೊಟ್ಟವರು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಎನ್ನುವುದನ್ನೂ ನಾವು ಮರೆಯಬಾರದು.
ಕೇವಲ 15 ದಿವಸಗಳ ನವಜಾತ ಶಿಶುವಿಗೆ ಹೃದಯ ಸಂಬಂಧಿ ಚಿಕಿತ್ಸೆಗೆ ಅತೀ ತುರ್ತಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕೆರದೊಯ್ಯಬೇಕಿತ್ತು. ಈಬಗ್ಗೆ ಮಿಥುನ್ ರೈ ಅವರಲ್ಲಿ ವಿಷಯ ತಿಳಿಸಲಾಗುತ್ತದೆ. ಕೂಡಲೇ ಕಾರ್ಯಪ್ರವ್ವತ್ತರಾದ ಅವರು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಬೆಂಗಳೂರು ದಾರಿ ನಡುವೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡುತ್ತಾರೆ.
ಇತ್ತ ಸುಳ್ಯದ ಕೆ.ವಿ.ಜಿ.ಆಸ್ಪತ್ರೆಯ ಅಂಬುಲೆನ್ಸ್ ಚಾಲಕ ಹನೀಫ್ ಅವರನ್ನು ಸಂಪರ್ಕಿಸಿದಾಗ ಆತ ಒಪ್ಪಿಕೊಂಡು ಕೇವಲ 4.50 ಗಂಟೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಕರೆದೊಯ್ಯುವಲ್ಲಿ ಯಶಸ್ವಿಯಾಗುತ್ತಾರೆ.ಆದರೆ ಇದೆಲ್ಲದರ ಹಿಂದೆ ಇದ್ದದ್ದು ಮಾತ್ರ ಮಿಥುನ್ ರೈ.
ಮಂಗಳೂರು- ಪುತ್ತೂರು-ಸುಳ್ಯ- ಮಡಿಕೇರಿ-ಮೈಸೂರು ರಸ್ತೆಯಾಗಿ ಅಂಬುಲೆನ್ಸ್ ಸಾಗುತ್ತದೆ.ಈ ಎಲ್ಲಾ ಕಡೆಗಳಲ್ಲೂ ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ಪೊಲೀಸ್ ಅಧಿಕಾರಿಗಳ ಮೂಲಕ ಮಾಡಿಕೊಡುವ ಮೂಲಕ ಮಗುವನ್ನು ಸಕಾಲದಲ್ಲಿ ಕರೆದೊಯ್ಯಲು ನೆರವಾದವರು ಮಿಥುನ್ ರೈ.ಈ ಮೂಲಕ ನವಜಾತ ಶಿಶುವಿನ ತುರ್ತು ಚಿಕಿತ್ಸೆಗೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.
ಮಗುವನ್ನು ಸಕಾಲದಲ್ಲಿ ಕರೆದೊಯ್ದ ಅಂಬುಲೆನ್ಸ್ ಚಾಲಕ ಹನೀಫ್ ಹಾಗೂ ಅದರ ಹಿಂದೆ ಅಷ್ಟೇ ಚುರುಕಾಗಿ ಸಕಲ ವ್ಯವಸ್ಥೆ ಮಾಡಿದ ಮಿಥುನ್ ರೈ ಇಬ್ಬರೂ ಅಭಿನಂದನಾರ್ಹರು.






