ಎಪ್ರಿಲ್ 9 ರಿಂದ 12 ರವರೆಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆಯಲಿರುವ ಬೆದ್ರ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶಾಸಕ, ಬೆದ್ರ ಉತ್ಸವ ಸಮಿತಿಯ ಅಧ್ಯಕ್ಷರಾಗಿರುವ ಉಮಾನಾಥ ಕೋಟ್ಯಾನ್ ಅವರು ಶನಿವಾರ ಬಿಡುಗಡೆಗೊಳಿಸಿದರು.
ಎಪ್ರಿಲ್ 9 ರಂದು ಸಂಜೆ 4 ಗಂಟೆಗೆ ಆಹಾರ ಮಳಿಗೆ ಹಾಗೂ ಮನೋರಂಜನೆ ಆಟಗಳ ಉದ್ಘಾಟನೆ ನಡೆಯಲಿದ್ದು ಸಂಜೆ 7 ಕ್ಕೆ ಝೀ ಕನ್ನಡ ಕಾಮಿಡಿ ಕಿಲಾಡಿಗಳಿಂದ ‘ ಹಾಸ್ಯ ಸಂಗಮ’ ಕಾರ್ಯಕ್ರಮ ಹಾಗೂ ರಾತ್ರಿ 9 ರಿಂದ ಪ್ರಸಾದ್ ಆಳ್ವ ಕೊಣಾಜೆ ಅವರ ಸಾರಥ್ಯದ ಕುರಲ್ ಕಲಾವಿದರಿಂದ ” ಏರ್ ?” ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ಎಪ್ರಿಲ್ 10 ರಂದು ಸಂಜೆ 6 ಕ್ಕೆ ಚೇತನ್ ಜೈನ್ ಸಾರಥ್ಯದಲ್ಲಿ ಆಂಗಿಕಮ್ ಡ್ಯಾನ್ಸ್ ಗ್ರೂಪ್ ಇವರಿಂದ ನೃತ್ಯ ಪ್ರದರ್ಶನ, ರಾತ್ರಿ 7-30 ಕ್ಕೆ ಬೆದ್ರ ಉತ್ಸವ ಉದ್ಘಾಟನೆ, ರಾತ್ರಿ 9 ರಿಂದ ಶಾರದಾ ನಾಟ್ಯಾಲಯ ಮೂಡುಬಿದಿರೆ ಕಲಾ ತಂಡದಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.
ಎಪ್ರಿಲ್ 11 ರಂದು ಸಂಜೆ 6ಕ್ಕೆ ಬಾಲಪ್ರತಿಭೆಗಳಾದ ಪ್ರಣತಿ ಜೋಶಿ ಹಾಗೂ ಪ್ರಜೇತ ಜೋಶಿ ಸುಲ್ಕೇರಿ ಅವರಿಂದ ಮ್ಯಾಜಿಕ್ ಪ್ರದರ್ಶನ, ಸಂಜೆ 7 ಕ್ಕೆ ಝೀ ಕನ್ನಡ ಸರಿಗಮ ಕಲಾವಿದರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಬಿಗ್ ಬಾಸ್ ರನ್ನರ್ ಅಪ್ ಪ್ರಶಸ್ತಿ ವಿಜೇತೆ ರಕ್ಷಿತಾ ಶೆಟ್ಟಿ ವಿಶೇಷ ಆಕರ್ಷಣೆಯಾಗಿ ಪಾಲ್ಗೊಳ್ಳಲಿದ್ದಾರೆ.
ಎಪ್ರಿಲ್ 12 ಸಂಜೆ 6 ಕ್ಕೆ ದಿನೇಶ್ ದೇವಾಡಿಗ ಅಶ್ವತ್ಥಪುರ ಇವರಿಂದ ನಾದ ವೈಭವ,ಸಂಜೆ 7 ಕ್ಕೆ ಸಮಾರೋಪ ಸಮಾರಂಭ ಹಾಗೂ ರಾತ್ರಿ 9 ರಿಂದ ಅನೀಶ್ ಎಸ್.ಅವರ ಸಾರಥ್ಯದ ಎಂ.ಜೆ.ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ತಂಡದಿಂದ ‘ ವೈವಿಧ್ಯಮಯ ನೃತ್ಯ ಕಾರ್ಯಕ್ರಮ’ ನಡೆಯಲಿದೆ.
ವಿವಿಧ ಬಗೆಯ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರ ಮಳಿಗೆಗಳು , ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳ ಮನೋರಂಜನೆ ಬೆದ್ರ ಉತ್ಸವದ ವಿಶೇಷತೆ ಎಂದವರು ವಿವರಿಸಿದರು.
ಸಮಿತಿಯ ಸಂಚಾಲಕರಾದ ಹರೀಶ್ ದೇವಾಡಿಗ ಅವರು ನಾಲ್ಕು ದಿವಸಗಳ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ ಮಳಿಗೆಗಳು, ಪೇಟೆಯೊಳಗಿನ ದೀಪಾಲಂಕಾರದ ಕುರಿತು ವಿವರಿಸಿದರು.ಕಾರ್ಯಕ್ರಮದ ಯಶಸ್ಸಿಗೆ ಸರ್ವರ ಸಹಕಾರ ಕೋರಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಗೋಪಾಲ ಶೆಟ್ಟಿಗಾರ್, ಕೋಶಾಧಿಕಾರಿ ನಾಗೇಶ್ ಬಂಗೇರ, ಗೌರವ ಸಲಹೆಗಾರ ರಂಜಿತ್ ಪೂಜಾರಿ, ಸದಸ್ಯರಾದ ಗಣೇಶ್ ಬಿ.ಅಳಿಯೂರು, ಸಂತೋಷ್ ಕುಮಾರ್, ಲೋಕೇಶ್ ಶೆಟ್ಟಿ ಮುಚ್ಚೂರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










